Sunday, October 5, 2008

ನಾ ಶಾಶ್ವತವಾಗಿರಲು...

ನಾನಿರುವ ಈ ನೆಲ, ಇರುವುದು ನಾಳೆಯು
ನಾಕಂಡ ಆಗಸ, ಕಾಣುವುದು ನಾಳೆಯು
ನಾನಡೆವ ಈ ದಾರಿಗೆ, ನಾನಿಲ್ಲ ನಾಳೆ
ನಾನಿಟ್ಟ ಹೆಜ್ಜೆ ಮೇಲೆ, ಮತ್ಯಾರದೊ ಪಯಣ-
ಅಳಿಸಿ ಹಾಕುವುದೇ, ನಾಬಿಟ್ಟು ಹೋದ ಹೆಜ್ಜೆ ಗುರುತು.
ನಾನಾಳಿದ ಸಾಮ್ರಾಜ್ಯಕೆ, ಇನ್ಯಾರದೊ ಒಡೆತನ-
ಕಿತ್ತಿ ಹಾಕುವುದೇ, ನಾಬಿತ್ತಿ ಹೋದ ರಾಮರಾಜ್ಯದ ಫಸಲು.
ಓ ದೇವರೇ.........!! ಹಾಗಾಗದಿರಲು
ನಭ-ನಕ್ಷತ್ರಗಳಿರುವವರೆಗು, ನಾ ಸತ್ತೂ ಸಾಯದಿರಲು
ನಾನೇನು ಮಾಡಲಿ ಹೇಳು.............?

Thursday, March 13, 2008

ಹೇಗೆ ಮರೆಯಲಿ ನಿನ್ನ

ಮೌನದ ಇರುಳಲಿ
ತಣ್ಣನೆ ಹವೆಯಲಿ
ಕುಳಿತಿದೆ ನಾನು
ಕೆರೆಯ ದಡದಲಿ

ನೀರಿನ ನಾದಕೆ
ಮೀನಿನ ನಾಟ್ಯಕೆ
ಮರಳಿತು ಹೃದಯವು
ನಿನ್ನಯ ನೆನಪಿಗೆ

ಎದೆಯಲಿ ಯಾತನೆ
ತಾಳದೆ, ಬಂಧು
ಮರೆಯಲೆ ಬೇಕು
ನಿನ್ನನು ಎಂದು

ಉಕ್ಕಿನ ಕವಚದಿ
ತುಂಬಿದೆ ನೆನಪು
ನನ್ನಲಿ ಉಳಿಸದೆ
ಸ್ವಲ್ಪವು ತುಣುಕು

ಕೆರೆಯ ಮಧ್ಯೆ
ಪೆಟ್ಟಿಗೆ ಬಿಟ್ಟು
ದಡಕೆ ಬರಲು
ಕಷ್ಟ ಪಟ್ಟು

ಮೇಲಕೆ ನೋಡಿದೆ
ನಿಟ್ಟುಸಿರಾಗಿ
ನಗುತಿದೆ ನೀನೆ
ಚಂದಿರನಾಗಿ

ಇನ್ನ್ಹೆಗೆ ಮರೆಯಲಿ
ಗೆಳತಿ ನಿನ್ನ
ನೆನಪಲೆ ಕಳೆಯುವೆ
ಬಾಳನು ಎನ್ನ

Saturday, February 23, 2008

ನೀ ದೂರಾದ ಮೇಲೆ...

ನೀ ಹಾಡಿದ ಆ ಹಾಡಿಗೆ, ಶ್ರುತಿಯಾದೆ
ನಾ ಗೆಳತಿ...
ನೀ ಬರೆಯದ ಆ ಕವನಕೆ, ಧ್ವನಿಯಾದೆ
ನನ ಗೆಳತಿ...
ನೀ ನಡೆಯುವ ಸುಡು ದಾರಿಗೆ, ನೆರಳಾದೆ
ನಾ ಗೆಳತಿ...
ನೀ ಮುಡಿಯುವ ಮಂದಾರಕೆ, ಘಮವಾದೆ
ನನ ಗೆಳತಿ...
ಅರಿಯದೇ ನಿ ಹೋದೆ, ಮನದಾಳದ
ಈ ಪ್ರೀತಿ ...
ಇರುಳಾಯಿತು ನನ ಬಾಳಿಗೆ, ನೀನಿಲ್ಲದೆ
ಓ ಗೆಳತಿ...!!

Monday, February 4, 2008

ಹೇಳಿ ಹೋಗು ಕಾರಣ........

ಸಪ್ತ ಸಾಗರದ ಕೊನೆಯ ಹನಿಯು
ಬತ್ತಿ ಹೋಗುವ ಮುನ್ನ........
ನೀಲಿ ಆಗಸದ ಕೊನೆಯ ತಾರೆ
ಮರೆಯಾಗಿ ಹೋಗುವ ಮುನ್ನ........
ಮಗುವು ಕುಡಿದ ತಾಯಿ ಹಾಲೇ
ವಿಷವಾಗುವ ಮುನ್ನ........
ನನ್ನ ಹೃದಯ ಬಡಿತ ನಿಂತು
ನನ್ನ ಉಸಿರೇ ನಿಲ್ಲೊ ಮುನ್ನ........
ನಾನ್ಯಾಕೆ ಇಷ್ಟವಾಗಲಿಲ್ಲವೆಂದು
ಹೇಳಿಹೋಗು ನಿ ಕಾರಣ.

Wednesday, January 30, 2008

ಕನಸೊಂದು ಕಮರಿಹೋದಾಗ...

ನನ್ನ ಬದುಕಿನ ಮೊದಲ ಕವಿತೆ:

ಸುಪ್ರಭಾತದ ಮಂಜಿನ ಇಬ್ಬನಿಯಲ್ಲಿ
ಮಲ್ಲಿಗೆಯೊಂದು ಅರಳುತ್ತಿತ್ತು,
ಆಕೆಯ ಮುಡಿ ಸೇರುವ ಬಯಕೆಯಿಂದ;
ಸರಿದು ಹೋದಳು ಮುಡಿದುಕೊಳ್ಳಲಾರದೆ
ಬೇಸರವಾದ ಹೂ ಹಾಗೆಯೇ ಬಾಡಿಹೋಯಿತು.
ಇಚ್ಛೆಯಿದ್ದರೆ ಅರಳುತ್ತಿತ್ತೇನೋ........!
ಅರಳಿತಾದರು ಇನ್ನಾರಿಗಾಗಿ!!